ವೀರಭದ್ರ ಸ್ವಾಮಿ ಹಿನ್ನಲೆ
ಅಹಾ ವೀರಾ; ಆಹ ಹಾ ರುದ್ರ ;
ನಮ್ಮ ಶ್ರೀ ವೀರಭದ್ರದೇವರು ಹೇಗಿರ್ದರೆಂದರೆ :
ಅಯ್ಯಾ ಪ್ರಳಯದುರಿ ಮೂರ್ತಿಗೊಂಡಂತೆ : ಕಿಡಿಯನುಗುಳುವ ಕಣ್ಣು:ಲಲಾಟದಲ್ಲಿ ಪುಂಡ್ರ;
ಕೈಯಲ್ಲಿ ಮಸೆದೆಲಗು:ರಣಚೂರಿ ಕಠಾರಿ;
ವೀರಬಾಣ ಹೊಗೆಬಾಡಾ;
ವಜ್ರಬಾಣ ರತ್ನಗತ್ತಿ;ಉರುಲಿನ ಹಗ್ಗ; ಇಂತೀ ಆಯುಧ ಸನ್ನದ್ದನಾಗಿ; ಹೋ ಎಂದು ಕೂಗಿ ಆರ್ಭಟಿಸಿ; ದಕ್ಷನ ಯಜ್ಞಭೂಮಿಯನ್ನು ಹೊಕ್ಕು; ; ಅಲ್ಲಿ ಕೂಡಿದ ಕೋಟಿಗಟ್ಟಲೆ ದೇವತೆಗಳನ್ನು ಕಂಡು; ಕಮ್ಮನೇ ಕೆಮ್ಮಲು;ಕೆಂಡದುಂಡಿಗಳು ಉರಿದೆದ್ದವಯ್ಯ:
ಎಂಬ ಈ ವಡಬು ದಕ್ಷನ ಯಜ್ಞವನ್ನು ವೀರಭದ್ರ ನಾಶಪಡಿಸುವ ಕಥೆಯನ್ನು ಒಳಗೊಂಡಿದ್ದು ಇಂಥ ಅನೇಕ ಒಡಬುಗಳನ್ನು ಪುರವಂತರು ಗುಗ್ಗಳಸಂದರ್ಭದಲ್ಲಿ ಹೇಳುವುದನ್ನು ಕಂಡರೆ ಮೈರೋಮಾಂಚನಗೊಳ್ಳುವುದು,
ಅಹಹಾ ವೀರಾ, ಅಹಹಾ ಶರಬಾ, ಅಹಹಾ ರುದ್ರ, ಧನಿಕರೆಂದು ಹೇಳುವವರನ್ನು ದಾರಿದ್ರ್ಯಕ್ಕೆ ಒಳಗು ಮಾಡಿತಯ್ಯಾ ನಿಮ್ಮ ಮಾಯೆ! ಸತ್ಯವೆಂದು ಹೇಳುವವರನ್ನು ಅಸತ್ಯಕ್ಕೆ ಒಳ ಮಾಡಿತಯ್ಯಾ ಮಾಯೆ! ಭಕ್ಷ್ಯಭೋಜನಗಳನ್ನೂಂಡು ಕೇಕೇ ಹಾಕುವುದಕ್ಕೆ ಹುಟ್ಟಿಕೊಂಡು ಬಂದವ ನಲ್ಲ ಈ ವೀರಭದ್ರ ತಿಳಿಯೇ ಮರುಳೇ ಖಡೇ ಖಡೇ’ ಎಂದು ವೀರಗಾಸೆಯ ಹೆಜ್ಜೆ ಹಾಕುತ್ತ ವೀರಭದ್ರ ದೇವರ ಒಡಪುಗಳನ್ನು ಅತ್ಯಾಕರ್ಷಕವಾಗಿ ಉಣಬಡಿಸಿದ ಪುರವಂತರ ಸೇವೆ ನಿಜಕ್ಕೂ ಅದ್ಬುತ
Ilಬೃಂಗಿ , ಬೃಂಗೀಶ್ವರ II
ಶಿವನ ಪರಿವಾರ ದೇವತೆಗಳಲ್ಲಿ ಒಂದಾದ
ಬೃಂಗಿ ಋಷಿ, ಪರಮೇಶ್ವರನ ಭಕ್ತ. ಸದಾಕಾಲವೂ ಶಿವನ ಧ್ಯಾನದಲ್ಲಿ ಮಗ್ನನಾಗಿ ಶಿವನನ್ನು ಕುರಿತು ಧ್ಯಾನಿಸುತ್ತಾನೆ. ಆದರೆ, ಶಕ್ತಿರೂಪಿಣಿಯಾದ ಪಾರ್ವತಿಯ ಬಗ್ಗೆ ಅಷ್ಟಕ್ಕಷ್ಟೇ. ಪಾರ್ವತಿಯನ್ನು ಎಂದೂ ಆರಾಧಿಸುವ ಮನಸ್ಸಿಲ್ಲ. ಕಾರಣ, ಪರಶಿವನನ್ನು ಆರಾಧಿಸಿದಮೇಲೆ ಇತರ ದೇವತೆಗಳನ್ನು ಆರಾಧಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ.ಬೃಂಗಿಯು, ಒಂದು ದಿನ ಪರಶಿವನನ್ನು ಕಾಣಲು ಕೈಲಾಸಕ್ಕೆ ತೆರಳಿದ.ಕೈಲಾಸದಲ್ಲಿ ಶಿವ ಪಾರ್ವತಿಯರು ಪಕ್ಕ ಪಕ್ಕದಲ್ಲಿ ಕುಳಿತಿದ್ದರು.
ಬೃಂಗಿ ಕೇವಲ ಪರಶಿವನಿಗೆ ಮಾತ್ರ ಪ್ರದಕ್ಷಿಣೆ ಮಾಡಲು ಮುಂದಾದ.ಆಗ ಪಾರ್ವತಿಯು, ನೀನು ಸತಿ ಪತಿಗಳಾದ ನಮ್ಮಿಬ್ಬರಿಗೂ ಒಟ್ಟಾಗಿ ಪ್ರದಕ್ಷಿಣೆ ಮಾಡಬೇಕು, ಕೇವಲ ಶಿವನಿಗೆ ಮಾತ್ರ ಪ್ರದಕ್ಷಿಣೆ ಸಲ್ಲದು ಎಂದಳು.ಅದೇಕೋ ಶಿವ ಪಾರ್ವತಿ ಇಬ್ಬರಿಗೂ ಒಟ್ಟಾಗಿ ಪ್ರದಕ್ಷಿಣೆ ಮಾಡಲಾರೆ ಎಂದ.
ತಕ್ಷಣವೇ, ಪಾರ್ವತಿಯು ಶಿವನ ತೊಡೆಯ ಮೇಲೆ ಕುಳಿತು, ಈಗ ಶಿವನಿಗೆ ಮಾತ್ರ ಹೇಗೆ ಪ್ರದಕ್ಷಿಣೆ ಮಾಡುತ್ತೀಯ?, ನೋಡುತ್ತೇನೆ ಎಂದಳು.
ಬೃಂಗಿಯು ತಕ್ಷಣವೇ ದುಂಬಿಯ (ಬೃಂಗ) ರೂಪವನ್ನು ತಾಳಿ, ಶಿವನತಲೆಯ ಸುತ್ತಿ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ.ಇದರಿಂದಾಗಿ ಕೋಪಗೊಂಡ ಪಾರ್ವತಿ ಶಿವನಲ್ಲಿ ತನ್ನ ಅಹವಾಲು ತಿಳಿಸಿದಳು.ಶಿವ ಪಾರ್ವತಿಯರು ಆಗ ಅರ್ಧನಾರೀಶ್ವರ ರೂಪವನ್ನು ತಾಳಿದರು.ಆಗ ಬೃಂಗಿಯು ಇಲಿಯ ರೂಪ ತಾಳಿ ಪರಶಿವನ ಕಾಲನ್ನು ಮಾತ್ರ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದ.ಪಾರ್ವತಿಗೆ ಮತ್ತಷ್ಟು ಕೋಪ ಬಂದು, ನಿನಗೆ ನಿನ್ನ ತಾಯಿಯ ದೇಹದಿಂದ ಬಂದ ಅಂಶಗಳಾದ ರಕ್ತ, ಮಾಂಸಗಳು ಇಲ್ಲದಾಗಲಿ ಎಂಬ ಶಾಪ ನೀಡಿದಳು. ತಕ್ಷಣವೇ ಬೃಂಗಿಯ ದೇಹವು ರಕ್ತಮಾಂಸಗಳಿಲ್ಲದೆ, ತನ್ನ ತಂದೆಯ ಅಂಶದಿಂದ ಬಂದ ಮೂಳೆ,ರಕ್ತನಾಳಗನ್ನು ಮಾತ್ರವೇ ಹೊಂದಿದ.
ರಕ್ತ ಮಾಂಸಗಳಿಲ್ಲದ ನಿಶ್ಯಕ್ತ ದೇಹ ಅಲ್ಲೇ ಕುಸಿದು ಬಿತ್ತು.ತನ್ನ ತಪ್ಪಿನ ಅರಿವಾಗಿ ಶಿವ ಪಾರ್ವತಿಯರನ್ನು ಪ್ರಾರ್ಥಿಸಿದ.
|ಮೂರು ಕಾಲಿನ ಬೃಂಗೀಶ್ವರ |
ಆಗ ಪರಶಿವನು ಬೃಂಗಿಗೆ ಎದ್ದು ನಿಲ್ಲಲು ಆಧಾರವಾಗಿ ಮೂರನೇ ಕಾಲನ್ನು ಕರುಣಿಸಿದ ಬೃಂಗಿಗೆ, 'ಬೃಂಗೀಶ್ವರ' ಎಂಬುದಾಗಿ ಮರುನಾಮಕರಣ ಮಾಡಿದ. ಅಂದಿನಿಂದ, ಬೃಂಗಿಗೆ ದೇಹದಲ್ಲಿ ಕೇವಲ ಮೂಳೆಗಳು ಮತ್ತು ರಕ್ತನಾಳಗಳು ಮಾತ್ರ ಇರುವಂತಾಯಿತು.
ಶಿವಾಯಗಳ ಮಹಾದ್ವಾರಗಳಲ್ಲಿ ಮೂರು ಕಾಲಿನ ಬೃಂಗಿಯಮೂ ರ್ತಿಯನ್ನು ಕಾಣಬಹುದು.
No comments:
Post a Comment